**********************************
ಈ ಪ್ರಶ್ನೆಗಳನ್ನು ಕೇಳಿದರೆ ಬಹುಶಃ ಕೆಲ ಭಯಂಕರ ಕನ್ನಡ ಪ್ರೇಮಿಗಳಿಗೆ ಸಿಟ್ಟು ಬರಬಹುದು. ನಮಗೂ ಕನ್ನಡ ಪ್ರೇಮ/ ಅಭಿಮಾನ ಇದ್ದೇಇದೆ. ಆದರೆ ವಾಸ್ತವವನ್ನು ಮರೆಮಾಚುವಷ್ಟು ಅಲ್ಲ.
ಏತಕ್ಕಾಗಿ ಈ ಬಂದ್ ಕರೆ ನೀಡಿದ್ದು? ಎಂಇಎಸ್ ವರ್ತನೆಯ ವಿರುದ್ಧ ತಾನೆ? ಸರಿ, ಈ ಬಂದ್ ನಿಂದ ಒಮ್ಮಿಂದೊಮ್ಮೆಲೇ ಎಂಇಎಸ್ ನವರ ಮನ:ಪರಿವರ್ತನೆಯಾಗಿ ಅವರೂ ಕರ್ನಾಟಕಕ್ಕೆ ಜೈ ಎನ್ನುತ್ತಾರೆಯೇ? ಖಂಡಿತಾ ಇಲ್ಲ. ಅವರ ಮೇಲೆ ಯಾವ ಪರಿಣಾಮವೂ ಆಗುವುದಿಲ್ಲ. ಎಮ್ಮೆ ಮೈಮೇಲೆ ಮಳೆ ಬಿದ್ದಂತೆ ಅಷ್ಟೇ. ಕಳೆದ ಎಪ್ಪತ್ತು ವರ್ಷಗಳಿಂದಲೂ ಈ ಮರಾಠಿ ಭಾಷಾಂಧರು ಇದ್ದಹಾಗೆಯೇ ಇದ್ದಾರೆ. ಅವರು ಬದಲಾಗುವುದೂ ಇಲ್ಲ. ನಾನೂ ೪೫ ವರ್ಷಗಳಿಂದ ಬೆಳಗಾವಿಯಲ್ಲೇ ಇದ್ದವನು. ಒಬ್ಬ ಪತ್ರಕರ್ತನಾಗಿ ಈ ಗಡಿಭಾಷಾ ವಿವಾದವನ್ನು/ ಮಹಾಜನವರದಿಯನ್ನು ಸಾಕಷ್ಟು ಆಳವಾಗಿ ಅಭ್ಯಸಿಸಿದವನು. ಮರಾಠಿಗರ ಗಲಭೆ ನೋಡಿದವನು. ಎಲ್ಲ ಬೆಳವಣಿಗೆ ಕಂಡವನು. ಬರೆದವನು. ಹೌದು, ಮೊದಲಿನ ಕಾವು ಈಗ ಉಳಿದಿಲ್ಲ.
ಆದರೆ ಆಗಾಗ ತಮ್ಮ ಅಸ್ತಿತ್ವವನ್ನು ತೋರಿಸಲು ಅಥವಾ ಕಾದುಕೊಳ್ಳಲು ಏನಾದರೊಂದು ಕ್ಯಾತೆ ತೆಗೆಯುವುದು ಅವರ ಅಭ್ಯಾಸ. ಅದಕ್ಕಾಗಿ ಕಾರಣ ಹುಡುಕುತ್ತಿರುತ್ತಾರೆ. ಮತ್ತೆ ತಣ್ಣಗಾಗುತ್ತಾರೆ. ಅಷ್ಟೆ. ಅದಕ್ಕೆ ಪರಿಹಾರ ಬೆಂಗಳೂರಿನವರಿಂದ ಸಿಗುವುದಿಲ್ಲ. ಈಗ ಕೇವಲ ಸುಪ್ರೀಂ ಕೋರ್ಟು ಮಾತ್ರ ಅಂತಿಮ ಪರಿಹಾರ ನೀಡಬಲ್ಲುದು. ಅಲ್ಲಿ ಯಾವ ಚಲನೆಯೂ ಕಂಡುಬರುತ್ತಿಲ್ಲ. ಚಾಲನೆ ಕೊಡುವ ಆಸಕ್ತಿಯೂ ಯಾರಲ್ಲೂ ಉಳಿದಿಲ್ಲ. ಮುಂದಿನ ಶತಮಾನದವರೆಗೆ ಕಾಯಬೇಕಾದೀತು. ಬೆಳಗಾವಿ ರಾಜಕಾರಣಿಗಳಿಗೆ ಮರಾಠಿಗರ ಮತಗಳೂ ಅನಿವಾರ್ಯವಾದ್ದರಿಂದ ಅವರ ವಿರುದ್ಧ ಮಾತನಾಡಲುಹೋಗುವುದಿಲ್ಲ.
ಕೆಲವರು ಈ ಬಂದ್ ಗಿಂದ್ ಮಾಡುವುದು ತಮ್ಮ ಯಾವುದೋ ಲಾಭಕ್ಕಾಗಿ. ಅದು ಎಲ್ಲರಿಗೂ ಗೊತ್ತಿರುವ ವಿಚಾರ. ಅವರೂ ಬದುಕಬೇಕಲ್ಲ. ಬದುಕಲಿ. ಆದರೆ ಸುಮ್ಮನೇ ತಣ್ಣಗಿರುವ ವಾತಾವರಣವನ್ನು ಕದಡಿ ಮತ್ತಿಷ್ಟು ಗೊಂದಲ ಎಬ್ಬಿಸದೇ ಇದ್ದರೆ ಅದೇ ಬೆಳಗಾವಿ ಕನ್ನಡಿಗರಿಗೆ ಮಾಡುವ ದೊಡ್ಡ ಉಪಕಾರವಾದೀತು.
ಎಲ್. ಎಸ್. ಶಾಸ್ತ್ರಿ