ಬೆಳಗಾವಿ: ಸುಮಾರು 30 ವರ್ಷಗಳ ಹಿಂದಿನ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ಆದೇಶವನ್ನು ಪಾಲಿಸದ ಕಾರಣ, ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರ ಕಾರನ್ನು ಜಪ್ತಿ ಮಾಡಲಾಗಿದೆ. ಸಣ್ಣ ನೀರಾವರಿ ಇಲಾಖೆಯು ಗುತ್ತಿಗೆದಾರರೊಬ್ಬರಿಗೆ ಬಾಕಿ ಬಿಲ್ ಪಾವತಿಸದ ಪ್ರಕರಣ ಇದಾಗಿದೆ.
ಇಂದು ಬೆಳಗಾವಿಯ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿದ್ದ ಜಿಲ್ಲಾಧಿಕಾರಿಗಳ ಕಾರನ್ನು ವಕೀಲ ಒ.ಬಿ. ಜೋಶಿ ಅವರು ಜಪ್ತಿ ಮಾಡಿ, ನ್ಯಾಯಾಲಯದ ಎದುರು ತಂದು ನಿಲ್ಲಿಸಿದರು.
1992-93ರಲ್ಲಿ ಚಿಕ್ಕೋಡಿಯ ದೂಧಗಂಗಾ ನದಿಗೆ ದಿವಂಗತ ನಾರಾಯಣ ಗಣೇಶ ಕಾಮತ್ ಎಂಬ ಗುತ್ತಿಗೆದಾರರು ಬ್ಯಾರೇಜ್ ನಿರ್ಮಿಸಿದ್ದರು. ಬ್ಯಾರೇಜ್ ನಿರ್ಮಾಣಕ್ಕೆ ಅಗತ್ಯವಿದ್ದ ಸಿಮೆಂಟ್ ಪೂರೈಸುವಲ್ಲಿ ಸಣ್ಣ ನೀರಾವರಿ ಇಲಾಖೆಯು ವಿಳಂಬ ಮಾಡಿದ್ದರಿಂದ ಗುತ್ತಿಗೆದಾರ ಕಾಮತ್ ಅವರಿಗೆ ಭಾರಿ ನಷ್ಟ ಉಂಟಾಗಿತ್ತು.
ಷರತ್ತುಬದ್ಧ ಗುತ್ತಿಗೆಯಾಗಿದ್ದರೂ ಬಿಲ್ ಪಾವತಿಯಾಗದ ಕಾರಣ, ಗುತ್ತಿಗೆದಾರ ಕಾಮತ್ ಅವರು 1995ರಲ್ಲಿ ನೀರಾವರಿ ಇಲಾಖೆ ವಿರುದ್ಧ ನ್ಯಾಯಾಲಯದ ಮೊರೆ ಹೋಗಿದ್ದರು. ಬೆಳಗಾವಿಯ ಪ್ರಥಮ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ವಿಚಾರಣೆ ನಡೆಸಿ, ಗುತ್ತಿಗೆದಾರನಿಗೆ ಪರಿಹಾರ ನೀಡುವಂತೆ ಆದೇಶಿಸಿತ್ತು. ಈ ಆದೇಶದ ವಿರುದ್ಧ ಇಲಾಖೆಯು ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿತ್ತು. ನಂತರ ಪ್ರಕರಣ ಮತ್ತೆ ಕೆಳ ಹಂತದ ನ್ಯಾಯಾಲಯಕ್ಕೆ ಬಂದಾಗ, ನ್ಯಾಯಾಲಯವು 2024ರ ಜುಲೈ 31ರಂದು ಆದೇಶ ಹೊರಡಿಸಿ, ಗುತ್ತಿಗೆದಾರ ಕಾಮತ್ ಅವರಿಗೆ 1995ರ ಆಗಸ್ಟ್ 11 ರಿಂದ ಶೇ. 9ರಷ್ಟು ಬಡ್ಡಿ ಸಮೇತ 1.31 ಕೋಟಿ ರೂ. ಪರಿಹಾರ ನೀಡುವಂತೆ ಆದೇಶಿಸಿತ್ತು.
ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಕಾರು ಜಪ್ತಿ
ಈ ವರ್ಷದ ಏಪ್ರಿಲ್ನಲ್ಲಿ ನ್ಯಾಯಾಲಯವು ಮತ್ತೊಮ್ಮೆ ಆದೇಶ ಹೊರಡಿಸಿ, ಈ ಮೊತ್ತದ ಶೇ. 50ರಷ್ಟನ್ನು ಜೂನ್ 2ರೊಳಗೆ ಪಾವತಿಸುವಂತೆ ಸೂಚಿಸಿತ್ತು. ಆದರೆ, ಅಧಿಕಾರಿಗಳು ಈ ಆದೇಶವನ್ನೂ ನಿರ್ಲಕ್ಷಿಸಿದ್ದರು.
ನೀರಾವರಿ ಇಲಾಖೆ ಕಾರ್ಯದರ್ಶಿ, ಜಿಲ್ಲಾಧಿಕಾರಿ ಹಾಗೂ ಸಣ್ಣ ನೀರಾವರಿ ಇಲಾಖೆ ಕಾರ್ಯನಿರ್ವಾಹಕ ಅಧಿಕಾರಿ ಅವರು ಕೂಡಲೇ ಪರಿಹಾರ ನೀಡುವಂತೆ ನ್ಯಾಯಾಲಯವು ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ನ್ಯಾಯಾಲಯದ ಆದೇಶದಂತೆ ಜಿಲ್ಲಾಧಿಕಾರಿಗಳ ಕಾರನ್ನು ಜಪ್ತಿ ಮಾಡಲಾಗಿದೆ ಎಂದು ನ್ಯಾಯವಾದಿ ಒ.ಬಿ. ಜೋಶಿ ತಿಳಿಸಿದ್ದಾರೆ.
ವರದಿ: ಚೇತನ ಡಿ.ಕೆ
ನಮ್ಮೂರ ಧ್ವನಿ ನ್ಯೂಸ್
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ
+91 9164577143