ಹಿಡಕಲ್ ಡ್ಯಾಂನಲ್ಲಿ ಸಾಂಸ್ಕೃತಿಕ ಸೌರಭ ಅಂಗವಾಗಿ ಕವಿಗೋಷ್ಠಿ
ಹುಕ್ಕೇರಿ: ಕಾವ್ಯ ಪರಂಪರೆ ಓದುಗರಿಗೆ ಹೊಸತನವನ್ನು ನೀಡುತ್ತದೆ. ಅನಾದಿಕಾಲದಿಂದಲೂ ಜನರ ಸಂವಹನವೇ ಕಾವ್ಯವಾಗಿತ್ತು. ಕವಿತೆಯನ್ನು ಸಹೃದಯರಿಗೆ ಹೇಗೆ ತಲುಪಿಸಬೇಕೆಂಬ ಸಂಗತಿ ಕವಿಗೆ ತಿಳಿದಿರಬೇಕು. ಕೇವಲ ನಮ್ಮ ಕಾವ್ಯ, ಕವನಗಳಿಗೆ ಸೀಮಿತವಾಗಿರದೆ ಆಚರಣೆಯಲ್ಲಿ ಬರಬೇಕು. ಕನ್ನಡ ನಾಡು ನುಡಿಗೆ ನಾವೆಲ್ಲ ಶ್ರಮಿಸಬೇಕೆಂಬ ತಾಲೂಕಾ ಮಕ್ಕಳ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಪ್ರಕಾಶ ಹೊಸಮನಿ ಅಭಿಪ್ರಾಯಪಟ್ಟರು.
ಕನ್ನಡ ಮತ್ತು ಸಂಸ್ಕ್ರತ ಇಲಾಖೆ ಹಾಗೂ ಮಹಿಳಾ ಕಲ್ಯಾಣ ಸಂಸ್ಥೆ ಜಂಟಿಯಾಗಿ ಕರ್ನಾಟಕ ಸಂಭ್ರಮ ಅಂಗವಾಗಿ ಹುಕ್ಕೇರಿ ತಾಲೂಕಿನ ಹಿಡಕಲ್ ಡ್ಯಾಂನ ಬಳಿ ಇರುವ ಶಕ್ತಿ ಸದನ ಮಹಿಳಾ ಪುನರ್ವಸತಿ ಕೇಂದ್ರದ ಸಭಾಂಗಣದಲ್ಲಿ ಆಯೋಜಿಸಿದ್ದ ಕವಿ ಗೋಷ್ಠಿ ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಎಸ್.ಎಂ.ಶಿರೂರ ಮಾತನಾಡುತ್ತಾ ಕವನ ರಚನೆ ಮತ್ತು ಅದನ್ನು ಪ್ರಸ್ತುತಪಡಿಸುವುದು ಕಲೆಯಾಗಿದೆ ಎಂದರು ಕವಿಗೋಷ್ಠಿ ಬಗ್ಗೆ ಹರ್ಷ ವ್ಯಕ್ತಪಡಿಸಿ ಎಲ್ಲರೂ ಓದಿದ ಕವನಗಳು ಬೇರೆ ಬೇರೆ ಬಗೆಯ ಅನುಭವವನ್ನು ನೀಡಿತು. ಸಮಾಜವನ್ನು ತಿದ್ದುವ ಶಕ್ತಿ ಸಾಹಿತ್ಯಕ್ಕಿದೆ ಆದರೆ ಇತ್ತೀಚಿನ ದಿನಗಳಲ್ಲಿ ಸಾಹಿತ್ಯ ಮಹತ್ವ ಕಳೆದುಕೊಳ್ಳುತ್ತಿದೆ ಎಂದರು.
ಮುಖ್ಯ ಅತಿಥಿಗಳಾಗಿ ಮುಖ್ಯಧ್ಯಾಪಕರಾದ ಶ್ರೀಮತಿ. ಬೊರಮ್ಮ ಅಂಗಡಿ, ಸುಭಾಷ್ ಕುಂಬಾರ ಹಾಗೂ ಕರ್ನಾಟಕ ರಕ್ಷಣಾ ವೇದಿಕೆಯ ಜಯಶ್ರೀ ಮತ್ತಿಕೊಪ್ಪ ಉಪಸ್ಥಿತರಿದ್ದರು. 20ಕ್ಕೂ ಹೆಚ್ಚು ಕವಿಗಳು ಕವನವಾಚನ ಮಾಡಿದರು. ಕರ್ನಾಟಕ ಪಬ್ಲಿಕ್ ಸ್ಕೂಲ್ ಪ್ರಾಚಾರ್ಯ ಕಿರಣ ಚೌಗಲಾ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ನಮ್ಮೂರ ಬಾನುಲಿ ರೇಡಿಯೋ ಕೇಂದ್ರದ ಆರ್ ಜೆ ಚೇತನ ಕುಲಕರ್ಣಿಯವರು ಕಾರ್ಯಕ್ರಮದ ನಿರೂಪಣೆ ಮಾಡಿ ಕೊನೆಯಲ್ಲಿ ವಂದಿಸಿದರು.