Live Stream

[ytplayer id=’22727′]

| Latest Version 8.0.1 |

National NewsState News

ಪು.ತಿ.ನ ಜನ್ಮದಿನ: ಕೃಷ್ಣಪ್ರಜ್ಞೆಯ ಮಹಾಕವಿ – ವಾಗ್ಗೇಯಕಾರ ಪು. ತಿ. ನರಸಿಂಹಾಚಾರ

ಪು.ತಿ.ನ ಜನ್ಮದಿನ: ಕೃಷ್ಣಪ್ರಜ್ಞೆಯ ಮಹಾಕವಿ – ವಾಗ್ಗೇಯಕಾರ ಪು. ತಿ. ನರಸಿಂಹಾಚಾರ

ಕೃಷ್ಣಪ್ರಜ್ಞೆಯ ಕವಿ ಎಂದೆನಿಸಿಕೊಂಡ ಪು. ತಿ. ನರಸಿಂಹಾಚಾರ ಅವರು ಕಾವ್ಯ ಮತ್ತು ಸಂಗೀತ ಎರಡೂ ಮೇಳೈಸಿದ ಮಹಾನ್ ವಾಗ್ಗೇಯಕಾರರು. ಅವರ “ಶ್ರೀಹರಿ ಚರಿತ್ರೆ” ಎಂಬ ಮಹಾಕಾವ್ಯ ಕನ್ನಡಕ್ಕೊಂದು ಮಹತ್ವದ ಕೊಡುಗೆ. ಕೆಲವು ಹೊಸ ರಾಗಗಳನ್ನು ಸಹ ಅವರು ಸೃಷ್ಟಿಸಿದ್ದಾರೆನ್ನುವದು ಬಹಳ ಜನರಿಗೆ ತಿಳಿದಿರಲಿಕ್ಕಿಲ್ಲ.

ಪುರೋಹಿತ ತಿರುನಾರಾಯಣ ನರಸಿಂಹಾಚಾರ ಅವರು ಹುಟ್ಟಿದ್ದು ೧೯೦೫ ಮಾರ್ಚ ೧೭ ರಂದು ಮೇಲುಕೋಟೆಯ ಒಂದು ಪೌರೋಹಿತ್ಯದ ಮನೆತನದಲ್ಲಿ‌. ಆದಾಯ ಅಷ್ಟಿರಲಿಲ್ಲ. ಶಿಕ್ಷಣ ಪಡೆದು ಎಲ್ಲಾದರೂ ಕೆಲಸ ಮಾಡೋಣವೆಂದು ಮೈಸೂರಿಗೆ ಹೋಗಿ ಸ್ವಲ್ಪ ವಿದ್ಯಾಭ್ಯಾಸ ಮಾಡಿ ಸೇನೆ ಕಚೇರಿಯಲ್ಲಿ ಗುಮಾಸ್ತನಾಗಿ ಸೇರಿಕೊಂಡು ಶಾಸನ ವಿಭಾಗದ ಸಂಪಾದಕರಾಗಿ ನಿವೃತ್ತಿ ಹೊಂದಿದ ಅವರು ಸಂಸ್ಕೃತ ಕನ್ನಡ ಆಂಗ್ಲ ಭಾಷೆಗಳಲ್ಲಿ ಸ್ವಂತ ಅಧ್ಯಯನ ನಡೆಸಿ ಪಾಂಡಿತ್ಯ‌ ಸಂಪಾದಿಸಿದರು.
ಬದುಕಿನ ಹೋರಾಟದ ನಡುವೆಯೇ ಕಾವ್ಯರಚನೆ ನಡೆದೇಇತ್ತು.

ಅವರ ಮೊದಲ ಕವನ ಸಂಕಲನ ” ಹಣತೆ”. ಕೊನೆಯ ಸಂಕಲನವೂ ” ಹಣತೆಯ ಹಾಡು.”
ತೀನಂಶ್ರೀ ಹಿರಿಯಣ್ಣಯ್ಯ ಮೊದಲಾದವರ ಮಾರ್ಗದರ್ಶನದಲ್ಲಿ ಕಾವ್ಯಾರಾಧನೆಗೆ ತೊಡಗಿದ ಪುತಿನ ಅವರು ಗೀತರೂಪಕ / ಗೀತನಾಟಕಗಳ ರಚನೆಯಲ್ಲಿ ತಮ್ಮ ಅಸಾಮಾನ್ಯ ಪ್ರತಿಭೆ ತೋರಿದವರು. ಗೋಕುಲ ನಿರ್ಗಮನ, ಅಹಲ್ಯೆ, ಶಬರಿ, ಶ್ರೀರಾಮ ಪಟ್ಟಾಭಿಷೇಕ, ಹಂಸದಮಯಂತಿ ಮೊದಲಾದವುಗಳು ಅದಕ್ಕೆ ನಿದರ್ಶನ. ಮಾಂದಳಿರು,, ರಸಸರಸ್ವತಿ, ರಥಸಪ್ತಮಿ, ನಿರೀಕ್ಷೆ ಮೊದಲಾದ ೧೧ ಕವನ ಸಂಕಲನಗಳು ಅವರಿಂದ ಬಂದವು. ೫ ಪ್ರಬಂಧ ಸಂಕಲನ , ೨ ಸಣ್ಣಕತೆಗಳ ಸಂಕಲನ, ೭ ಗದ್ಯಚಿತ್ರಗಳು , ಕೆಲವು ಅನುವಾದ ಕೃತಿಗಳನ್ನೂ ಹೊರತಂದರು.

” ಹರಿಚರಿತೆ ಮಹಾಕಾವ್ಯ ಅವರಿಗೆ ದೊಡ್ಡ ಹೆಸರು ತಂದುಕೊಟ್ಟಿತು. ಪ್ರಕೃತಿಯಲ್ಲಿ ದೈವತ್ವದ ಅನ್ವೇಷಣೆಗೆ ಹೊರಟ ಅವರು ಕೃಷ್ಣನ ಕಲ್ಪನೆಯನ್ನು ಸಾಮಾನ್ಯರಿಗಾಗಿ ಸಾಕ್ಷಾತ್ಕರಿಸಿಸಲು ಪ್ರಯತ್ನಿಸಿದರು. ಸಂಗೀತದಲ್ಲೂ ಪರಿಣತಿ ಇದ್ದ ಅವರು ವಾಸಂತಿ, ಋತುವಿಲಾಸ, ಗಾಂಧಾರದೋಲ, ಸಂಜೀವಿನಿ, ಹರಿಣ ಮೊದಲಾದ ರಾಗಗಳನ್ನು ಸೃಷ್ಟಿಸಿದರು.

೧೯೮೧ರಲ್ಲಿ ಚಿಕ್ಕಮಗಳೂರಿನಲ್ಲಿ ಜರುಗಿದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ಪದ್ಮಶ್ರೀ, ಪಂಪ ಪ್ರಶಸ್ತಿ, ನಾಡೋಜ ಮೊದಲಾದ ಗೌರವಗಳು ಅವರಿಗೆ ದೊರಕಿದವು. ವಾಸ್ತವವಾಗಿ ಜ್ಞಾನ ಪೀಠ ಪ್ರಶಸ್ತಿಗೆ ಅರ್ಹರಾದವರು ಪುತಿನ. ೧೯೯೬ ರಲ್ಲಿ ಅವರ ಮನೆಯನ್ನು ಸ್ಮಾರಕವಾಗಿ ಪರಿವರ್ತಿಸಲಾಯಿತು. ೧೯೯೮ರಲ್ಲಿ ಅವರು ನಿಧನ ಹೊಂದಿದರು.

– ಎಲ್. ಎಸ್. ಶಾಸ್ತ್ರಿ

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";