ಶಕ್ತಿನಗರ: ಸ್ಥಳೀಯ ಕ್ಯಾಷುಟೆಕ್ ನಿರ್ಮಿತಿ ಕೇಂದ್ರ, ಗೋಯಿಂಗ್ ಟು ಸ್ಕೂಲ್ ಸ್ವಯಂ ಸೇವಾಸಂಸ್ಥೆ ಹಾಗೂ ಬೆಂಗಳೂರಿನ ಸ್ಯಾಂಡ್ ಸ್ಟೋನ್ ಮೀಡಿಯಾ ಸಹಯೋಗದಲ್ಲಿ ಗಿಲ್ಲೇಸೂಗೂರ ಹಾಗೂ ದೇವನಪಲ್ಲಿ ಸರಕಾರಿ ಪ್ತೌಢಶಾಲಾ ವಿದ್ಯಾರ್ಥಿನಿಯರಿಗೆ ವಿವಿಧ ಕೌಶಲ್ಯಭಿವೃದ್ಧಿ ತರಬೇತಿ ಅಂಗವಾಗಿ ಪರಿಸರ ಸಂರಕ್ಷಣೆಗಾಗಿ ಕಟ್ಟಡ ನಿರ್ಮಾಣದ ನೂತನ ತಂತ್ರಜ್ಞಾನ ಕುರಿತು ಆಯೋಜಿಸಲಾದ ಒಂದು ದಿನದ ಪ್ರಾತ್ಯಕ್ಷಿಕೆ ಹಾಗೂ ಕ್ಷೇತ್ರಭೇಟಿಯು ಯಶಸ್ವಿಗೊಂಡಿತು.
ಕ್ಯಾಷುಟೆಕ್ ನ ಶರಣಬಸಪ್ಪ ಪಟ್ಟೇದರವರು ಪರಿಸರ ಸಂರಕ್ಷಣೆ ಕಾರ್ಯದಲ್ಲಿ ತೊಡಗಿರುವ ಕುರಿತು ಮಾಹಿತಿ ನೀಡಿದರು. ವಿದ್ಯಾರ್ಥಿಗಳಿಗೆ ನೀಡುವ ಜಾಗೃತಿ ಕಾರ್ಯವು ಮುಂದಿನ ಪೀಳಿಗೆಯ ಸಂಕಷ್ಟಗಳನ್ನು ದೂರಮಾಡುವ ರಾಜಮಾರ್ಗವಾಗಿದೆಯೆಂದು ಅಭಿಪ್ರಾಯಪಟ್ಟರು.
ಪರಿಸರ ಸಂರಕ್ಷಣೆಯ ಮೂಲ ತತ್ವಗಳ ಕುರಿತು ತರಬೇತಿ ಸಲಹೆಗಾರ ಭಾಲಚಂದ್ರ ಜಾಬಶೆಟ್ಟಿಯವರು ನೀಡಿದ ಉಪನ್ಯಾಸದಲ್ಲಿ ಹೆಚ್ಚುತ್ತಿರುವ ಜಾಗತಿಕ ತಾಪಮಾನ ನಿಯಂತ್ರಿಸಲು ಕೈಗೊಳ್ಳಬಹುದಾದ ತುರ್ತು ಕ್ರಮಗಳ ಬಗ್ಗೆ ಹಾಗೂ ವಿದ್ಯಾರ್ಥಿಗಳ ಪಾತ್ರದ ಕುರಿತು ವಿವರಿಸಿದರು. ಜಲಸಾಕ್ಷರತೆ ಇಂದಿನ ಅವಶ್ಯಕತೆಯಾಗಿದ್ದು ಜಲಮೂಲಗಳ ಸಂರಕ್ಷಣೆ, ನೀರಿನ ಹಿತಮಿತ ಹಾಗೂ ಸದ್ಭಳಕೆ ಮಾಡಲು ಸಮಾಜವನ್ನು ಪ್ರೇರೇಪಿಸುವ ಕಾರ್ಯದಲ್ಲಿ ವಿದ್ಯಾರ್ಥಿಗಳು ತೊಡಗಿಸಿಕೊಳ್ಳಬೇಕೆಂದು ಕರೆ ನೀಡಿದರು.
ಕ್ಯಾಷುಟೆಕ್ ನ ಆರ್ ಆ್ಯಂಡ್ ಡಿ ಅಭಿಯಂತರ ಸುರೇಂದ್ರ ಪಾಟೀಲ ಪ್ರಾತ್ಯಕ್ಷಿಕೆ ಹಾಗೂ ಕ್ಷೇತ್ರಭೇಡಿಯ ನೇತ್ರತ್ವ ವಹಿಸಿದ್ದರು.
ಅನಿಲ ಕುಲಕರ್ಣಿ, ಭುವನ ಮತ್ತಿತರರು ವೇದಿಕೆಯಲ್ಲಿ ದ್ದರು. ರಾಯನಗೌಡ ಪಾಟೀಲ ವಂದಿಸಿದರು.