ವೃದ್ಧಾಶ್ರಮದಲ್ಲಿ ವಚನ ಜ್ಯೋತಿ ಕಾರ್ಯಕ್ರಮ
ಬೆಳಗಾವಿ: ಇತ್ತೀಚಿನ ದಿನಮಾನದಲ್ಲಿ ಪಾಶ್ಚಿಮಾತ್ಯ ಸಂಸ್ಕೃತಿ ಭರಾಟೆಯಲ್ಲಿ ಶರಣರ ಸಂಸ್ಕೃತಿ ಮರೆಮಾಚುತ್ತಿದೆ. ಮಕ್ಕಳಿಗೆ ಶರಣರ ಸಂಸ್ಕೃತಿ ಕಲಿಸಿ ವಚನಗಳ ಕುರಿತು ಅರಿವು ಮೂಡಿಸಿದರೆ ಸದ್ಗುಣಗಳ ಬೀಜ ಬಿತ್ತಿದಂತಾಗುತ್ತದೆ ಎಂದು ನಾಗನೂರು ಶ್ರೀ ರುದ್ರಾಕ್ಷಿ ಮಠದ ಡಾ. ಅಲ್ಲಮಪ್ರಭು ಸ್ವಾಮಿಗಳು ಅಭಿಪ್ರಾಯ ವ್ಯಕ್ತ ಪಡಿಸಿದರು.
ನಗರದ ದೇವರಾಜ ಅರಸು ಬಡಾವಣಿಯಲ್ಲಿರುವ ನಾಗನೂರು ಶಿವ ಬಸವೇಶ್ವರ ಟ್ರಸ್ಟನ ಶ್ರೀಮತಿ ಚಿನ್ನಮ್ಮ ಬಸವಂತಯ್ಯ ಹಿರೇಮಠ ವೃದ್ಧಾಶ್ರಮದ ಸಭಾಭವನದಲ್ಲಿ ಆಯೋಜಿಸಿದ ಮಾಸಿಕ ವಚನ ಜ್ಯೋತಿ ಕಾರ್ಯಕ್ರಮದ ದಿವ್ಯಸಾನಿಧ್ಯವಹಿಸಿ ಮಾತನಾಡಿದರು.
ವಚನ ಸಂಸ್ಕೃತಿಯನ್ನು ಜೀವನದಲ್ಲಿ ಅಳವಡಿಸಿಕೊಂಡರೆ, ಮನುಷ್ಯರಾಗಿ ಬಾಳಲು ಸಾಧ್ಯ. ನಮ್ಮ ನಡೆನುಡಿಗಳಲ್ಲಿ ಸಮಾನತೆ ಕಾಯ್ದುಕೊಳ್ಳಬೇಕಾಗಿದೆ ಎಂದರು. ಶರಣ ಸಂಸ್ಕೃತಿಯಲ್ಲಿ ಕಾಯಕ ಮತ್ತು ದಾಸೋಹಕ್ಕೆ ಹೆಚ್ಚಿನ ಮಹತ್ವ ನೀಡಲಾಗಿದೆ. ಜೀವನದುದ್ದಕ್ಕೂ ಕಾರ್ಯ ಮತ್ತು ದಾಸೋಹ ಸೇವೆಯಲ್ಲಿ ನಿರಂತರಾಗಿರುವ ಶರಣ ದಂಪತಿಗಳಾದ ಕೆಂಪಣ್ಣ ರಾಮಾಪುರೆ ಇವರ ಸೇವೆ ಸ್ಮರಿಸಿ, ಅವರ 43ನೇ ವಿವಾಹ ವಾರ್ಷಿಕೋತ್ಸವ ನಿಮಿತ್ಯ ಅವರಿಗೆ ಆಶೀರ್ವದಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯ ವಹಿಸಿದ ಜಾಗೃತ ಲಿಂಗಾಯತ ಮಹಾಸಭಾ ಬೆಳಗಾವಿ ಅಧ್ಯಕ್ಷರಾದ ಬಸವರಾಜ ರೊಟ್ಟಿ ಅವರು ಮಾತನಾಡಿ, ಮಕ್ಕಳಿಗೆ ಕಾರ್ಯಕ್ರಮದ ಮಹತ್ವ ಕಲಿಸಬೇಕು. ಲಿಂಗಾಯತ ಮಹಾ ಮಹಾಸಭೆ ಮೂಲಕ ಶರಣ ಸಂಸ್ಕೃತಿ ಪ್ರಚಾರಕ್ಕೆ ವರ್ಷದುದ್ದಕ್ಕೆ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ, ವೃದ್ಧಾಶ್ರಮ ಸಂಯೋಜಕರಾದ ಎಂ. ಎಸ್. ಚೌಗಲಾ, ಸಂಚಾರಿ ಗುರುಬಸವ ದಳದ ಮಹಾಂತೇಶ ತೇರನ ಗಟ್ಟಿ, ಶಿವಾನಂದ ಸಂಗಿ, ಬಸವರಾಜ ಮತ್ತಿಕೊಪ್ಪ , ಲಿಂಗಾಯತ ಮಹಾಸಭಾದ ಸುರೇಶ ನರಗುಂದ, ಬೂದಿಹಾಳ, ಕೆ.ಪಿ.ಎಸ್ ಯರಗಟ್ಟಿ ಶಾಲೆಯ ಪ್ರಾಚಾರ್ಯರಾದ ಕಿರಣ್ ಚೌಗಲಾ ಹಾಗೂ ಮುಂತಾದವರು ಉಪಸ್ಥಿತರಿದ್ದರು.