ಸರ್ಕಾರಿ ಪದವಿ ಪೂರ್ವ ಕಾಲೇಜು ಕೆರೂರು ರಾಷ್ಟ್ರೀಯ ಸೇವಾ ಯೋಜನೆಯ ಘಟಕ ಹಾಗೂ ಚಿಕ್ಕೋಡಿ ತಾಲೂಕಿನ ಇನ್ನರ್ ವೀಲ್ ಕ್ಲಬ್ ಸಹಭಾಗಿತ್ವದಲ್ಲಿ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯ ಪ್ರಯುಕ್ತವಾಗಿ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಉಚಿತ ರಕ್ತದ ಗುಂಪು ತಪಾಸನೆ, ಆರೋಗ್ಯದ ಕುರಿತು ಅರಿವು ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಡಾಕ್ಟರ್ ಬಾಹುಬಲಿ ಕತ್ರಾಳಿ ಮತ್ತು ರೂಪಾಲಿ ಕತ್ರಾಳೆ 100 ಮಕ್ಕಳಗೆ ಉಚಿತವಾಗಿ ರಕ್ತದ ಗುಂಪಿನ ತಪಾಸನೆ ಮಾಡಿದರು. ನಂತರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಡಾಕ್ಟರ್ ಪ್ರಿಯಾಂಕ ಚೌಗಲಾ ಅವರು ಮಾತನಾಡಿ ನಿಸರ್ಗದಲ್ಲಿ ಸಮಾಜದ ಸೃಷ್ಟಿಗೆ ಪುರುಷ ಹೇಗೆ ಕಾರಣವು, ಹಾಗೆ ಹೆಣ್ಣು ಅಷ್ಟೇ ಪ್ರಮುಖ ಕಾರಣವಾಗಿದ್ದಾಳೆ . ಕೇವಲ ಒಂದೇ ಕೈಯಿಂದ ಚಪ್ಪಾಳೆ ಆಗಲಾರದು, ಎರಡು ಕೈಗಳು ಸೇರಿದಾಗ ಹೇಗೆ ಚಪ್ಪಾಳೆ ಆಗುತ್ತದೆಯೋ, ಅದೇ ರೀತಿ ದೇಶದ ಪ್ರಗತಿಯಲ್ಲಿ, ಸಮಾಜದ ಅಭಿವೃದ್ಧಿಯಲ್ಲಿ ಕುಟುಂಬದ ಬೆಳವಣಿಗೆಯಲ್ಲಿ ಹೆಚ್ಚು ಪಾತ್ರವನ್ನು ಹೆಣ್ಣು ಮಕ್ಕಳು ನಿರ್ವಹಿಸುತ್ತಿದ್ದಾರೆ. ಆದರೆ ಇಂದು ಹಲವಾರು ಅಡೆತಡೆಗಳ ಮಧ್ಯೆಯು ಎದ್ದು ನಿಂತು ಸರ್ವ ರಂಗಗಳಲ್ಲೂ ತಮ್ಮ ಅಸ್ತಿತ್ವವನ್ನು ತೋರ್ಪಡಿಸುತ್ತಿದ್ದಾರೆ . ಹೆಣ್ಣು ಅಬಲೆ ಅಲ್ಲ ಅವಳು ಸಬಲೇ ಎನ್ನುವುದನ್ನು ಜಗತ್ತಿಗೆ ಸಾರುತ್ತಿದ್ದಾರೆ.
ಹೆಣ್ಣು ಮಕ್ಕಳು ಇಂದು ಹಲವಾರು ಆರೋಗ್ಯದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ, ಏಕೆಂದರೆ ಕುಟುಂಬಕ್ಕೆ ಹೆಚ್ಚಿನ ಕಾಳಜಿಯನ್ನು ತೋರಿಸಿ, ತಮ್ಮ ಸ್ವಂತ ಕಾಳಿಜಿಯನ್ನು ಕಡೆಗನಿಸುತ್ತಿರುವುದರಿಂದ ಹಲವಾರು ಮಾನಸಿಕ ಮತ್ತು ಶಾರೀರಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇಂದು ಫಾಸ್ಟ್ ಫುಡ್ ಸಂಸ್ಕೃತಿ ಹೆಚ್ಚಿಗೆ ಆಗುತ್ತಿರುವುದರಿಂದ ಹಲವು ಅಪಾಯಕಾರಿ ರಾಸಾಯನಿಕ ಪದಾರ್ಥ ಮಿಸ್ರಿತ ಆಹಾರಗಳ ಸೇವನೆಯಿಂದ ಹಲವು ಅಪಾಯಕಾರಿ ಉದರ ಸಂಬಂಧಿತ ಸಮಸ್ಯೆಗಳು, ಕ್ಯಾನ್ಸರ್ ದಂತ ಕಾಯಿಲೆಗಳು, ಅಸಿಡಿಟಿ, ಗರ್ಭಕೋಶ ಸಮಸ್ಯೆಗಳು ತಲೆದೋರುತ್ತಿವೆ, ಶಿಸ್ತಿನ ಜೀವನ, ಮನೆಯಲ್ಲಿಯೇ ತಯಾರಿಸಿದ ಆಹಾರದ ಸೇವನೆ ಮಾಡುವುದು ಅತಿ ಮುಖ್ಯವಾಗಿದೆ ಎಂದು ಹೇಳಿದರು.
ಇನ್ನೋರ್ವ ಅತಿಥಿಗಳಾಗಿ ಆಗಮಿಸಿದ ಡಾ. ಬಾಹುಬಲಿ ಕಾತ್ರಾಳಿ ಅವರು ಮಾತನಾಡಿ ನಾವೆಲ್ಲರೂ ವಿದ್ಯಾರ್ಥಿ ಜೀವನದಲ್ಲಿ ಸರಳವಾಗಿ ಬದುಕಿ ಉನ್ನತ ವಿಚಾರಗಳನ್ನು ಅಳವಡಿಸಿಕೊಳ್ಳಬೇಕು. ಆರೋಗ್ಯ ಸಂಪತ್ತಿನ ಮುಂದೆ ಇನ್ಯಾವುದೇ ಸಂಪತ್ತು ಮುಖ್ಯವಾಗುವುದಿಲ್ಲ ಎಂದು ಆರೋಗ್ಯದ ಮಹತ್ವದ ಕುರಿತು ಮಾತನಾಡಿದರು.
ಇನ್ನರ್ ವಿಲ್ ಸಂಸ್ಥೆಯ ಕುರಿತು ಕ್ಲಬ್ ನ ಸದಸ್ಯರಾದ ಶ್ರೀಮತಿ ವಿಜಯಲಕ್ಷ್ಮಿ ಕೋಲಾರ್ ಅವರು ಮಾತನಾಡಿ ಸಮಾಜದಲ್ಲಿ ಸೌಲಭ್ಯದಿಂದ ವಂಚಿತರಾದ ಮತ್ತು ಕಷ್ಟದಲ್ಲಿರುವ ಜನರಿಗೆ, ಅಂಗವಿಕಲರಿಗೆ, ಅನಾಥ ಮಕ್ಕಳ ಆಶ್ರಮ, ಮತ್ತು ವೃದ್ರಾಶ್ರಮಗಳಿಗೆ ಭೇಟಿ ನೀಡಿ ಅವರಿಗೆ ಸ್ಪಂದಿಸುವ ಮತ್ತು ಅವರ ಅವಶ್ಯಕತೆಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ಈಡೇರಿಸುವ ಕೆಲಸವನ್ನು ಮಾಡಿಕೊಂಡು ಬರುತ್ತಿದೆ ಎಂದು ಹೇಳಿದರು.ಕಾಲೇಜಿನ ಎನ್ಎಸ್ಎಸ್ ಕಾರ್ಯಕ್ರಮ ಅಧಿಕಾರಿಗಳಾದ ಶ್ರೀಶೈಲ್ ಕೋಲಾರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಚಿಕ್ಕೋಡಿ ಇನ್ನರ್ ವೀಲ್ ಕ್ಲಬ್ ನ ಅಧ್ಯಕ್ಷರಾದ ಶ್ರೀಮತಿ ಭಾಗ್ಯಶ್ರೀ ತೊಗ್ಗಿ, ಕಾರ್ಯದರ್ಶಿಯಾದ ಶ್ರೀಮತಿ ಸುವರ್ಣ ಬಬಲೇಶ್ವರ, ಸದಸ್ಯರಾದ ಶ್ರೀಮತಿ ರೂಪಾಲಿ ಕತ್ರಾಲೆ, ಶ್ರೀಮತಿ ಧನಶ್ರೀ ಹಾಗೂ ಕಾಲೇಜಿನ ಹಿರಿಯ ಉಪನ್ಯಾಸಕರಾದ ಶಂಕರ್ ತೇಲಿ ಅವರು ಉಪಸ್ಥಿತರಿದ್ದರು.
ಕುಮಾರಿ ಗಾಯತ್ರಿ ಪರ ಗೌಡ ಕಾರ್ಯಕ್ರಮವನ್ನು ನಿರೂಪಿಸಿದರು, ಸಾಗರ್ ಬೆಕ್ಕೇರಿ ಮತ್ತು ಮಾರುತಿ ಮಾಯನವರ್ ಏನ್ ಎಸ್ ಎಸ್ ಗೀತೆ ಹಾಡಿದರು, ಶಿವಾನಂದ್ ಹರಕೆ ವಂದನಾರ್ಪಣೆ ಮಾಡಿದರು.