ರಾಯಭಾಗ: ತಾಲೂಕಿನ ಯಲ್ಪರಟ್ಟಿ ಗ್ರಾಮದ ಅರಣ್ಯ ಸಿದ್ದೇಶ್ವರ ಜಾತ್ರಾ ಮಹೋತ್ಸವ ನಿಮಿತ್ಯ ದೇವರ ಮೇಲೆ ಭಂಡಾರ ತೂರಿ ಸಹಸ್ರಾರು ಭಕ್ತರು ತಮ್ಮ ಹರಕೆ ತೀರಿಸಿಕೊಂಡರು.
ಭಕ್ತರಿಂದ ಭಂಡಾರ ತೂರಿ ಬರುವ ದೃಶ್ಯ ನಯನಮನೋಹರವಾಗಿತ್ತು.
ಐದು ದಿನಗಳ ಕಾಲ ನಡೆದ ಜಾತ್ರಾ ಮಹೋತ್ಸವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಜಾತ್ರೆ ಪ್ರಾರಂಭವಾದ ಮೊದಲ ದಿನದಿಂದ ದೇವರಿಗೆ ಭಕ್ತರು ಉರುಳು ಸೇವೆ ಸಲ್ಲಿಸುವುದು ವಾಡಿಕೆ ಅದರಂತೆ ನಾಲ್ಕನೇ ದಿನ ನೈವ್ಯದ್ಯ ಕೊನೆಯ ದಿನ ಸೋಮವಾರದಂದು ದೇವರಿಗೆ ನಿವ್ವಾಳಕಿಯನ್ನು ಸಲ್ಲಿಸುವ ಹಾಗೂ ದೇವನುಡಿಯೊಂದಿಗೆ ಜಾತ್ರೆಯು ಕರ್ನಾಟಕ ಹಾಗೂ ಮಹಾರಾಷ್ಟ್ರ ಸೇರಿದಂತೆ ವಿವಿಧೆಡೆಯಿಂದ ಆಗಮಿಸಿದ್ದ ಭಕ್ತ ಸಮೂಹ 5-6 ಟನ್ ಗೂ ಹೆಚ್ಚು ಭಂಡಾರವನ್ನು ತೂರಿದ್ದರಿಂದ ಯಲ್ಪರಟ್ಟಿ ಗ್ರಾಮದ ದೇವಸ್ಥಾನದ ಆವರಣ ಹಳದಿಮಯವಾಗಿತ್ತು.
ಭಂಡಾರವೋ? ಬಂಗಾರವೋ ಅನ್ನುವಂತೆ ಸೂರ್ಯ ಕಿರಣಗಳಿಗೆ ಹೊನ್ನು ಹೊಳೆದಂತೆ ಹೊಳೆಯುತ್ತಿತ್ತು. ಜಾತ್ರೆಯಲ್ಲಿ ಶುದ್ದ ಅರಿಸಿಣ ಪುಡಿಯನ್ನೇ ಮಾರಾಟ ಮಾಡಿ ಎಂದು ಜಾತ್ರಾ ಕಮಿಟಿಯು ಪರಿಸರ ಕಾಳಜಿಯನ್ನು ಮೆರೆಯುತ್ತಿದೆ. ಕಳಪೆ ಗುಣಮಟ್ಟದ, ರಾಸಾಯನಿಕ ಮಿಶ್ರಿತ ಭಂಡಾರ ಮಾರಾಟ ಮಾಡಿದ್ದಲ್ಲಿ ಮುಲಾಜಿಲ್ಲದೇ ಜಾತ್ರಾ ಕಮಿಟಿ ದಂಡ ವಿಧಿಸುವ ಎಚ್ಚರಿಕೆ ನೀಡಲಾಗಿತ್ತು.
ಜಾತ್ರೆಯ ಸಂದರ್ಭದಲ್ಲಿ ಐದು ದಿನಗಳ ಕಾಲ ಜನರು ದೇವಸ್ಥಾನ ಸಮೀಪದ ಹೊಲ ಗದ್ದೆಗಳಲ್ಲಿಯೇ ವಸತಿ ಇದ್ದು, ಅಡುಗೆ ಮಾಡಿ ಊಟ ಮಾಡುವ ರೂಢಿಯು ಹಲವು ವರ್ಷಗಳಿಂದ ನಡೆದುಕೊಂಡು ಬಂದಿದ್ದು ವಿಶೇಷತೆಗಳಲ್ಲೊ0ದಾಗಿದೆ.
ನಿವ್ವಾಳಕಿಯ ನಿಮಿತ್ಯವಾಗಿ ದೇವಸ್ಥಾನದ ಹಿಂಬದಿಯಲ್ಲಿ ಪಲ್ಕಕ್ಕಿ ಆಗಮಿಸುತ್ತಿದ್ದಂತೆಯೇ ಜನ ತಾ ಮುಂದು ನಾ ಮುಂದು ಅಂತಾ ಮಹಿಳೆಯರು, ಮಕ್ಕಳು, ಯುವಕರು ಭಂಡಾರ ಹಾರಿಸಿದರು. ಜನ ಪಲ್ಲಕ್ಕಿ, ದೇವರ ಎತ್ತು, ದೇವರ ಕುದುರೆ, ದೇವರ ಪಲ್ಲಕ್ಕಿ ಬಂದಾಗಲೊಮ್ಮೆ ಭಂಡಾರ ತೂರಲಾಗತ್ತಿತ್ತು.ಕಳೆದ ನಾಲ್ಕು ದಿನಗಳಿಂದ ಡೊಳ್ಳುಗಾಯನ, ಮಹಾಪ್ರಸಾದ, ನಾಟಕ ಸೇರಿದಂತೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತೀಕ ಕಾರ್ಯಕ್ರಮಗಳು ನಡೆದವು. ಪಲ್ಲಕ್ಕಿ ಉತ್ಸವ ಜನಮನ ಸೆಳೆಯಿತು. ಜಾತ್ರಾ ಮಹೋತ್ಸವ ಅಂಗವಾಗಿ ಹಮ್ಮಿಕೊಂಡ ಎತ್ತಿನ ಗಾಡಿ ಶರ್ಯತ್ತು ಜೋಡುಕುದುರೆ ಶರ್ಯತ್ತು ಜನರನ್ನು ರಂಜಿಸುವ ಜೊತೆಗೆ ಹಲವಾರು ಕೃಷಿ ಪ್ರಧಾನ ಕ್ರೀಡೆಗಳು ನಡೆದವು.
ವರದಿ:ಕಲ್ಲಪ್ಪ ಪಾಮನಾಯಿಕ