400ಕ್ಕೂ ಹೆಚ್ಚು ಕನ್ನಡಿಗರ ಒಗ್ಗಟ್ಟಿನ ಐದನೇ ವರ್ಷದ ಸಂಭ್ರಮ


ಯುಕೆ: ಮಿಡ್ಲ್ಯಾಂಡ್ಸ್ ಪ್ರದೇಶದಲ್ಲಿ ಕನ್ನಡ ರಾಜ್ಯೋತ್ಸವವನ್ನು 400ಕ್ಕೂ ಹೆಚ್ಚು ಕನ್ನಡಿಗರು ಅದ್ಧೂರಿಯಾಗಿ ಆಚರಿಸಿದರು. ಕೋವೆಂಟ್ರಿ, ಬರ್ಮಿಂಗ್ಹ್ಯಾಮ್, ಲೀಮಿಂಗ್ಟನ್ ಸ್ಪಾ, ವಾರ್ವಿಕ್, ರಗ್ಬಿ ಮತ್ತು ನಮ್ಮವರು ಯುಕೆ ಕನ್ನಡ ಸಮೂಹಗಳ ಸಂಯುಕ್ತ ಆಯೋಜನೆಯ ಈ ಐದನೇ ವರ್ಷದ ಮಹೋತ್ಸವವು “ಒಗ್ಗಟ್ಟಿನಲ್ಲಿಯೇ ಬಲವಿದೆ” ಎಂಬ ಘೋಷವನ್ನು ಮತ್ತೊಮ್ಮೆ ನೆನಪಿಸಿದೆ.

ಕಾರ್ಯಕ್ರಮಕ್ಕೆ ಭಾರತೀಯ ಕಾನ್ಸುಲ್ ಜನರಲ್ ಡಾ. ವೆಂಕಟಾಚಲಂ ಮುರುಗನ್, ಮೇಯರ್ ರಗ್ಗಿ ಸಿಂಗ್, ವಾರ್ವಿಕ್ ಕೌನ್ಸಿಲ್ ಚೇರ್ಮನ್ ನವೀನ್ ಟ್ಯಾಂಗ್ರಿ, ಕೌನ್ಸಿಲರ್ ಹೇಮಾ ಯಲ್ಲಪ್ರಗಡ ಹಾಗೂ ರೋಯಿಂಗ್ ಸಾಹಸಿ ಅನನ್ಯಾ ಪ್ರಸಾದ್ ಅವರು ಭಾಗವಹಿಸಿದರು. ಕನ್ನಡ ಧ್ವಜದ ಮಹತ್ವ, ಭಾಷಾ ಸಂರಕ್ಷಣೆ ಮತ್ತು ಮಾನವ ಮಾನಸಿಕ ಶಕ್ತಿಯ ಬಗ್ಗೆ ಅವರು ಪ್ರೇರಣಾದಾಯಕ ಸಂದೇಶಗಳನ್ನು ನೀಡಿದರು.


ಸಾಲುಮರದ ತಿಮ್ಮಕ್ಕನಿಗೆ ಅರ್ಪಿತವಾದ ಈ ರಾಜ್ಯೋತ್ಸವದಲ್ಲಿ ಮಕ್ಕಳ ‘ಪುಣ್ಯಕೋಟಿ’ ನೃತ್ಯ, ಜಾನಪದ–ಶಾಸ್ತ್ರೀಯ ಪ್ರದರ್ಶನಗಳು, GI ಟ್ಯಾಗ್ ಉಡುಪುಗಳ ಫ್ಯಾಷನ್ ಶೋ ಹಾಗೂ ಕನ್ನಡ ಸಾಹಿತ್ಯ ಕ್ವಿಜ್ಗಳು ನಡೆಯಿತು. ಕನ್ನಡ ಪುಸ್ತಕಗಳನ್ನು ಬಹುಮಾನವಾಗಿ ನೀಡಿ ಜ್ಞಾನ ಪ್ರಸಾರಕ್ಕೆ ಉತ್ತೇಜನ ನೀಡಲಾಯಿತು.

ಸಂಜೆ ವಿಜಯೇಂದ್ರ ಮತ್ತು ಶ್ರೀದೇವಿ ಅವರ ಹೃದಯಸ್ಪರ್ಶಿ ಹಾಡುಗಳು ಪ್ರೇಕ್ಷಕರನ್ನು ಕುಣಿಯುವಂತೆ ಮಾಡಿತು. ಕನ್ನಡ ಆಹಾರ ಹಾಗೂ ಜವಳಿ ಮಳಿಗೆಗಳು ಕಾರ್ಯಕ್ರಮಕ್ಕೆ ವಿಶೇಷ ಸೊಬಗು ತಂದವು.
ಕಾರ್ಯಕ್ರಮವು “ಕನ್ನಡವನ್ನು ಕೇಳೋಣ, ಹೇಳೋಣ, ಕಲಿಯೋಣ, ಉಳಿಸೋಣ” ಎಂಬ ಸಂದೇಶದೊಂದಿಗೆ ಯಶಸ್ವಿಯಾಗಿ ಮುಕ್ತಾಯಗೊಂಡಿತು.
ವರದಿ: ಚೇತನ ಡಿ.ಕೆ
ನಮ್ಮೂರ ಧ್ವನಿ ನ್ಯೂಸ್
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ
+91 9164577143





















