ನಾಡಿನ ವಿದ್ಯಾರ್ಥಿಗಳಲ್ಲಿ ಬಾಲ್ಯದಲ್ಲಿಯೇ ಶರಣ ಸಂಸ್ಕೃತಿ ಹಾಗೂ ಸಂಸ್ಕಾರ ಬೆಳೆಸುವ ಉದ್ದೇಶದಿಂದ ಶಿವಬಸವ ನಗರದ ರುದ್ರಾಕ್ಷಿ ಮಠದಲ್ಲಿ ಎಪ್ರಿಲ್ 15 ರಿಂದ 24 ರ ವರೆಗೆ 10 ದಿನಗಳ ಶರಣ ಸಂಸ್ಕೃತಿ ಸಂಸ್ಕಾರ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ನಾಗನೂರು ರುದ್ರಾಕ್ಷಿ ಮಠದ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು ತಿಳಿಸಿದ್ದಾರೆ.
ಎಳೆಯ ವಯಸ್ಸಿನಲ್ಲಿಯೆ ವಿದ್ಯಾರ್ಥಿಗಳಲ್ಲಿ ಕಾಯಕ, ದಾಸೋಹ ಹಾಗು ಪ್ರಸಾದದ ಮಹತ್ವವನ್ನು ತಿಳಿಸಿ ಕೊಡುತ್ತಾ ವಚನ ಸಾಹಿತ್ಯವನ್ನು ಅವರಿಗೆ ಪರಿಚಯಿಸಿ ವಿದ್ಯಾರ್ಥಿಗಳಲ್ಲಿ ಶಿಸ್ತು, ನಿಯಮ ಪಾಲನೆ, ಹೃದಯ ವೈಶಾಲ್ಯತೆ ಮುಂತಾದ ಮಾನವೀಯ ಮೌಲ್ಯಗಳನ್ನು ಬೆಳೆಸುವ ಉದ್ದೇಶದಿಂದ ಈ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀಗಳು ತಿಳಿಸಿದ್ದಾರೆ.
೧೦ ದಿನಗಳ ಈ ಶಿಬಿರದಲ್ಲಿ ಶರಣರ ಸಂಕ್ಷಿಪ್ತ ಜೀವನ ಚರಿತ್ರೆ, ವಚನಗಳಲ್ಲಿ ಕಾಯಕ, ದಾಸೋಹ, ಪ್ರಸಾದ ಪ್ರಾಮುಖ್ಯತೆ, ವಚನಗಳಲ್ಲಿ ವಿಜ್ಞಾನ, ನೈತಿಕತೆ,ಮಾನವೀಯತೆ, ಧರ್ಮದಲ್ಲಿ ದಯೆ, ದೇಶಭಕ್ತಿ, ಪರಿಸರ ಸಂರಕ್ಷಣೆ, ಭಾರತೀಯ ಕೃಷಿ ಪರಂಪರೆ, ಆಹಾರ ಮತ್ತು ಆರೋಗ್ಯ, ವೈಜ್ಞಾನಿಕ ಮನೋಭಾವ, ಸಾಮಾಜಿಕ ಜಾಲತಾಣಗಳ ಸದುಪಯೋಗ, ತಂದೆ ತಾಯಿಯರ ಪಾಲನೆ ಪೋಷಣೆ, ಗುರು ಹಿರಿಯರಿಗೆ ಗೌರವ ಸೇರಿದಂತೆ ಹತ್ತಾರು ವಿಷಯಗಳ ಮೇಲೆ ನಾಡಿನ ಹೆಸರಾಂತ ಸಂಪನ್ಮೂಲ ವ್ಯಕ್ತಿಗಳು ಉಪನ್ಯಾಸ ನೀಡುತ್ತಾ, ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಲಿದ್ದಾರೆ.
ಆಸಕ್ತ 8 ರಿಂದ 12 ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಈ ಶಿಬಿರದ ಸದುಪಯೋಗ ಪಡೆದುಕೊಳ್ಳಬಹುದು ಎಂದು ಶ್ರೀಗಳು ತಿಳಿಸಿದ್ದಾರೆ.