Live Stream

[ytplayer id=’22727′]

| Latest Version 8.0.1 |

Local News

ದಾಂಪತ್ಯ ಪ್ರೀತಿ ವಿಶ್ವಾಸಗಳ ಸಂಗಮ: ಡಾ. ತೋಂಟದ ಸಿದ್ಧರಾಮ ಸ್ವಾಮಿಗಳ ಆಶೀರ್ವಚನ

ದಾಂಪತ್ಯ ಪ್ರೀತಿ ವಿಶ್ವಾಸಗಳ ಸಂಗಮ: ಡಾ. ತೋಂಟದ ಸಿದ್ಧರಾಮ ಸ್ವಾಮಿಗಳ ಆಶೀರ್ವಚನ

ಬೆಳಗಾವಿ: “ದಾಂಪತ್ಯವೆಂದರೆ ಕೇವಲ ಗಂಡು–ಹೆಣ್ಣು ಒಟ್ಟಾಗಿ ಬದುಕುವುದು ಮಾತ್ರವಲ್ಲ. ಅದು ಪರಸ್ಪರ ಪ್ರೀತಿ, ವಿಶ್ವಾಸ ಮತ್ತು ಸಹಕಾರದ ಸುಗಂಧಿತ ಸಂಗಮ,” ಎಂದು ಯಡಿಯೂರಿನ ಜಗದ್ಗುರು ತೋಂಟದಾರ್ಯ ಮಠದ ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಹೇಳಿದ್ದಾರೆ.

ಶನಿವಾರ ಶಿವಬಸವ ನಗರ ನಾಗನೂರ ರುದ್ರಾಕ್ಷಿ ಮಠದಲ್ಲಿ ನಡೆದ ಅಪ್ರತಿಮ ವಾಗ್ಮಿ ಪದ್ಮಾವತಿ ಷಣ್ಮುಖಪ್ಪ ಅಂಗಡಿ ಅವರ 64ನೇ ಸ್ಮರಣೋತ್ಸವದ ಅಂಗವಾಗಿ ನಡೆದ ‘ಮಹಿಳಾ ರತ್ನ ಹಾಗೂ ಆದರ್ಶ ದಂಪತಿ’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.

“ಜೀವನದಲ್ಲಿ ಕಷ್ಟಗಳು ಬಂದಾಗ ದಂಪತಿಗಳು ಧೈರ್ಯ ಕಳೆದುಕೊಳ್ಳದೇ ಪರಸ್ಪರ ಸಮಾಲೋಚನೆ ಮೂಲಕ ಪರಿಹಾರ ಕಂಡುಕೊಳ್ಳಬೇಕು. ಈ ಅನ್ಯೋನ್ಯತೆಯೇ ದಾಂಪತ್ಯದ ಮಧುರತೆಯ ಮೂಲ,” ಎಂದು ಶ್ರೀಗಳು ಹೇಳಿದರು.

ಅವರು ಮುಂದುವರೆದು, “ಬರುವ ಸೆಪ್ಟೆಂಬರ್ 1ರಿಂದ ರಾಜ್ಯಾದ್ಯಂತ ‘ಬಸವ ಸಂಸ್ಕೃತಿ ಅಭಿಯಾನ’ ಹಮ್ಮಿಕೊಳ್ಳಲಾಗುತ್ತಿದೆ. ಬಸವಣ್ಣನವರ ತತ್ವಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಈ ಅಭಿಯಾನದಲ್ಲಿ ಪ್ರತಿಯೊಬ್ಬರೂ ಸಕ್ರಿಯವಾಗಿ ಪಾಲ್ಗೊಳ್ಳಬೇಕು,” ಎಂದು ಕರೆ ನೀಡಿದರು.

ಸಾಮರಸ್ಯದ ಸಂದೇಶ: ನಟ ಕೆ.ವಿ. ನಾಗರಾಜಮೂರ್ತಿ
ಆದರ್ಶ ದಂಪತಿ ಪ್ರಶಸ್ತಿ ಸ್ವೀಕರಿಸಿದ ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷ, ಖ್ಯಾತ ನಟ ಕೆ.ವಿ. ನಾಗರಾಜಮೂರ್ತಿ ಮಾತನಾಡಿ, “ಯುದ್ಧವೆಂಬುದು ಮನುಷ್ಯ ಕುಲಕ್ಕೆ ಕಳಂಕ. ಬಸವಣ್ಣನವರ ‘ಸಕಲ ಜೀವಾತ್ಮರಿಗೆ ಲೇಸನೆ ಬಯಸು’ ಎಂಬ ವಚನವನ್ನು ಅನುಸರಿಸಿದರೆ ಜಗತ್ತಿನಲ್ಲಿ ಯುದ್ಧಗಳೇ ನಡೆಯಲಿಲ್ಲ,” ಎಂದು ಬೋಧಿಸಿದರು. “ಭಾರತವು ಬಹುಜನಾಂಗ, ಬಹುಸಂಸ್ಕೃತಿ, ಬಹುಧರ್ಮಗಳ ಶಾಂತಿಯ ತೋಟವಾಗಿದೆ,” ಎಂದರು.

ಸಂಗೀತವು ಚೈತನ್ಯದ ಮಾರ್ಗ: ರೋಹಿಣಿ ಗಂಗಾಧರಯ್ಯ
ಮಹಿಳಾ ರತ್ನ ಪ್ರಶಸ್ತಿ ಪಡೆದ ಖ್ಯಾತ ಹಿಂದುಸ್ತಾನಿ ಗಾಯಕಿ ರೋಹಿಣಿ ಗಂಗಾಧರಯ್ಯ ಕರಜಗಿಮಠ ಮಾತನಾಡಿ, “ಸಂಗೀತವು ಜಾತಿ–ಮತಗಳ ಭೇದವಿಲ್ಲದೇ ಭಾವನೆಗಳನ್ನು ವ್ಯಕ್ತಪಡಿಸಿ, ಮನಸ್ಸಿಗೆ ನೆಮ್ಮದಿ ನೀಡುವ ಮಾಧ್ಯಮವಾಗಿದೆ. ಇದು ವ್ಯಕ್ತಿಯನ್ನು ಚೈತನ್ಯಮಯವನ್ನಾಗಿಸುತ್ತದೆ,” ಎಂದು ಭಾವನಾತ್ಮಕವಾಗಿ ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಾಗನೂರ ರುದ್ರಾಕ್ಷಿ ಮಠದ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು ವಹಿಸಿದ್ದರು. ನಟ ಕೆ.ವಿ. ನಾಗರಾಜಮೂರ್ತಿ ಅವರ ಧರ್ಮಪತ್ನಿ, ಪತ್ರಕರ್ತೆ ಎಸ್.ಜಿ. ತುಂಗರೇಣುಕ ಉಪಸ್ಥಿತರಿದ್ದರು.

ಹಿರಿಯ ಸಾಹಿತಿ ಸುನಂದ ಎಮ್ಮಿ ಅವರು ಪದ್ಮಾವತಿ ಷಣ್ಮುಖಪ್ಪ ಅಂಗಡಿ ಹಾಗೂ ರಾವ್ ಬಹದ್ದೂರ್ ಷಣ್ಮುಖಪ್ಪ ಅಂಗಡಿ ಅವರ ದಾಂಪತ್ಯದ ಸಾಧನೆಯ ಕುರಿತು ಉಪನ್ಯಾಸ ನೀಡಿದರು. ಕಲಬುರ್ಗಿ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕಿ ಉಜ್ವಲ ಹಿರೇಮಠ ಪ್ರಾಸ್ತಾವಿಕ ಭಾಷಣ ಮಾಡಿದರು. ಪ್ರಾಧ್ಯಾಪಕಿ ಶಿಲ್ಪಾ ಬೈರನಟ್ಟಿ ಸ್ವಾಗತಿಸಿದರು, ರಾಜಶೇಖರ ಪಾಟೀಲ ನಿರೂಪಿಸಿದರು ಹಾಗೂ ಪ್ರಾಧ್ಯಾಪಕಿ ಸುಪಣ್ಣ ಶಿರಗುಪ್ಪಿ ವಂದಿಸಿದರು.

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";