ಹುಣಸೂರು ತಾಲೂಕಿನ ಬಸವನಹಳ್ಳಿ ಗ್ರಾಮದವರಾದ ಕುಂಟೆಗೌಡರು ತಮ್ಮ ಇಡೀ ಜೀವನವನ್ನೇ ಧಾರ್ಮಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಸೇವೆಗೆ ಮೀಸಲಿಟ್ಟ ಉದಾತ್ತ ವ್ಯಕ್ತಿತ್ವ. ಇವರ ತಂದೆ ದಿ. ನರಸಿಂಹೆ ಗೌಡ ಗ್ರಾಮ ಯಜಮಾನರಾಗಿದ್ದರೆ, ತಾಯಿ ದಿ. ತಿಮ್ಮಮ್ಮ. ಮೂಲತಃ ರೈತ ಕುಟುಂಬದಲ್ಲಿ ಜನಿಸಿದ ಇವರ ವಿದ್ಯಾಭ್ಯಾಸ ಗ್ರಾಮೀಣ ಭಾಗದಲ್ಲೇ ಆರಂಭವಾಗಿ, ನಂತರ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಬಿಎ ಪದವಿ ಪಡೆದರು. ಹೀಗಾಗಿ ಗ್ರಾಮೀಣ ಬದುಕಿನ ಬೇರು ಮತ್ತು ಶೈಕ್ಷಣಿಕ ಬೆಳಕಿನ ಚೈತನ್ಯ ಎರಡೂ ಅವರ ವ್ಯಕ್ತಿತ್ವದಲ್ಲಿ ನಿರಂತರವಾಗಿ ಕಾಣಸಿಗುತ್ತವೆ.
ಕುಂಟೆಗೌಡರು 1978ರಲ್ಲಿ ಸ್ವಯಂ ಪ್ರೇರಣೆಯಿಂದಲೇ ತಮ್ಮ ಊರಿನ ಮಕ್ಕಳಿಗೆ ಉಚಿತವಾಗಿ ಮನೆ ಪಾಠ ನೀಡಿ ಶಿಕ್ಷಣ ಕ್ಷೇತ್ರಕ್ಕೆ ಕಾಲಿಟ್ಟರು. ಇದೊಂದು ಕಿರು ಹೆಜ್ಜೆಯಾಗಿ ಆರಂಭವಾದ ಈ ಪ್ರಯತ್ನ, ನಂತರ ಹಲವಾರು ಗ್ರಾಮಗಳಿಗೆ ವಿಸ್ತರಿಸಿತು. ಬಡತನದಿಂದ ಬಳಲುವ ಮಕ್ಕಳಿಗೆ ಓದು ಮುಂದುವರಿಸಲು ನೆರವಾಗಿದ್ದು, ಹಲವಾರು ಮಕ್ಕಳನ್ನು ದತ್ತು ತೆಗೆದುಕೊಂಡು ಶಿಕ್ಷಣ ಕೊಟ್ಟಿದ್ದಾರೆ.
ಅವರು ಗ್ರಾಮಗಳಲ್ಲಿ ಮಕ್ಕಳಿಗೆ ಜೀವನ ಕೌಶಲ್ಯ ಹಾಗೂ ವೃತ್ತಿ ಕೌಶಲ್ಯ ತರಗತಿಗಳನ್ನು ನಿರಂತರವಾಗಿ ನಡೆಸುತ್ತಿದ್ದಾರೆ. ಗ್ರಾಮದ ದೇವಾಲಯಗಳಲ್ಲಿ ಸ್ವಚ್ಛತಾ ಕಾರ್ಯಕ್ರಮಗಳನ್ನು ಆಯೋಜಿಸಿ, ಗದ್ದಿಗೆಯ ಭಗವದ್ಗೀತಾ ಮಂದಿರದ ಜವಾಬ್ದಾರಿಯನ್ನು ಸ್ವೀಕರಿಸಿ ಭಗವದ್ಗೀತೆಯ ಶ್ರವಣ-ಪಠಣ ಕಾರ್ಯಕ್ರಮಗಳನ್ನು ಶ್ರದ್ಧೆಯಿಂದ ಹಮ್ಮಿಕೊಂಡಿದ್ದಾರೆ. ವಿದ್ಯಾರ್ಥಿಗಳಿಗೆ ಉಚಿತವಾಗಿ ಭಗವದ್ಗೀತಾ ಪುಸ್ತಕಗಳನ್ನು ವಿತರಣೆ ಮಾಡುವುದರ ಜೊತೆಗೆ, ಕಂಠಪಾಠ ಸ್ಪರ್ಧೆ ಹಾಗೂ ಉಪನ್ಯಾಸ ಮಾಲಿಕೆಗಳನ್ನೂ ಆಯೋಜಿಸುತ್ತಿದ್ದಾರೆ.
ಅವರ ಸೇವಾ ಚಟುವಟಿಕೆಗಳಲ್ಲಿ ಆರೋಗ್ಯ ಕ್ಷೇತ್ರಕ್ಕೂ ಪ್ರಮುಖ ಸ್ಥಾನವಿದೆ. ಈವರೆಗೆ 80ಕ್ಕೂ ಹೆಚ್ಚು ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ಆಯೋಜಿಸಿದ್ದು, ಎನ್ಎಸ್ಎಸ್ ಶಿಬಿರಗಳಲ್ಲಿ ಭಾಗವಹಿಸಿ ಯುವಕರಿಗೆ ಮಾರ್ಗದರ್ಶನ ನೀಡಿದ್ದಾರೆ. ಶಾಲೆಗಳ ಬಿಡುವು ವೇಳೆಯಲ್ಲಿ ಮಕ್ಕಳಿಗೆ ಪ್ರೇರಣಾತ್ಮಕ ಉಪನ್ಯಾಸಗಳನ್ನೂ ನೀಡುತ್ತಿದ್ದಾರೆ. ಕಲಿಕಾ ಸಾಮಗ್ರಿಗಳ ವಿತರಣೆಯ ಮೂಲಕ ವಿದ್ಯಾರ್ಥಿಗಳಿಗೆ ಬೆಂಬಲ ನೀಡುತ್ತಿದ್ದಾರೆ.
ಪ್ರಸ್ತುತ ಕುಂಟೆಗೌಡರು ಏಕಲ್ ವಿದ್ಯಾಲಯದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದು, ಪಂಚಮುಖಿ ಶಿಕ್ಷಣದ ಮಾದರಿಯ ಮೂಲಕ ಗ್ರಾಮೀಣ ಶಿಕ್ಷಣಕ್ಕೆ ದಿಕ್ಕು ತೋರಿಸುತ್ತಿದ್ದಾರೆ. “ಆರೋಗ್ಯ ಫೌಂಡೇಶನ್” ಹಾಗೂ “ಏಕಲ್ ಗ್ರಾಮ ಫೌಂಡೇಶನ್” ಸಂಸ್ಥೆಗಳ ಮಾರ್ಗದರ್ಶಕರಾಗಿ ಕೆಲಸ ನಿರ್ವಹಿಸುತ್ತಿರುವ ಅವರು, ಗ್ರಾಮೀಣ ಮಹಿಳೆಯರು ಮತ್ತು ಯುವಕರಿಗೆ ಸ್ವ ಉದ್ಯೋಗ ತರಬೇತಿಗಳನ್ನು ನೀಡುವ ಮೂಲಕ ಸಮಗ್ರ ಸಮುದಾಯದ ಸಬಲೀಕರಣಕ್ಕೆ ಶ್ರಮಿಸುತ್ತಿದ್ದಾರೆ.
ಧಾರ್ಮಿಕ ಕೃತ್ಯಗಳಾದ ಗೋಪೂಜೆ, ತುಳಸಿ ಪೂಜೆ, ದೀಪ ಪೂಜೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಇವರಿಗೆ ಅನೇಕ ಮಠ-ಮಹಾಸ್ವಾಮೀಜಿಗಳ ಜತೆ ಆತ್ಮೀಯ ಸಂಬಂಧವಿದೆ. ತಮ್ಮ ಜಮೀನಿನಲ್ಲಿ ಅನೇಕ ವಿಧದ ಬೆಳೆಗಳನ್ನು ಬೆಳೆಸಿ ಮಾದರಿ ರೈತರಾಗಿಯೂ ಗುರುತಿಸಿಕೊಂಡಿದ್ದಾರೆ. ಧರ್ಮದ ಕುರಿತು ನುಡಿಸುವ ಅವರ ಉಪನ್ಯಾಸಗಳು ಜನರಲ್ಲಿ ಜಾಗೃತಿ ಮೂಡಿಸುತ್ತಿವೆ.
ಇವರ ಸೇವಾ ಮನೋಭಾವನೆಯನ್ನು ಗುರುತಿಸಿ ಉಕ್ಕಿನಕಂತೆ ಮಾದಳ್ಳಿ ಮಠದ ಶ್ರೀ ಸ್ವಾಮೀಜಿಯವರು ಅವರಿಗೆ “ಸಮಾಜ ಸೇವಕ” ಎಂಬ ಗೌರವ ಬಿರುದನ್ನು ಪ್ರದಾನಿಸಿದ್ದಾರೆ. ಇಷ್ಟೇ ಅಲ್ಲ, ಬಸವನಹಳ್ಳಿ ಗ್ರಾಮದಲ್ಲಿ ಬಡ ಕುಟುಂಬಗಳಿಗೆ ಉಚಿತವಾಗಿ ಎರಡು ಎಕರೆ ಭೂವನ್ನು ದಾನವಾಗಿ ನೀಡಿದ್ದಾರೆ. ಜೊತೆಗೆ, ಈ ವರ್ಷ ಬುಡಕಟ್ಟು ಜನಾಂಗದ ನೂರಾರು ಜೋಡಿಗಳಿಗೆ ಸಂಸ್ಥೆಗಳ ಸಂಯೋಜನೆಯಡಿ ಸಾಮೂಹಿಕ ವಿವಾಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ.
ಕುಂಟೆಗೌಡರ ಈ ಬದುಕು ಸಮಾಜಮುಖಿ ಕಾರ್ಯದ ಪ್ರೇರಣೆಯ ಬೆಳಕು. ಇಂತಹ ಸೇವಾ ಮನಸ್ಸುಳ್ಳ ವ್ಯಕ್ತಿತ್ವಗಳು ಗ್ರಾಮೀಣ ಭಾರತದ ನಿಜವಾದ ಶಕ್ತಿ.
ವರದಿ: ಚೇತನ ಡಿ.ಕೆ
ನಮ್ಮೂರ ಧ್ವನಿ ನ್ಯೂಸ್
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ
+91 9164577143