ಮಜಲಟ್ಟಿ: ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯ ಮಜಲಟ್ಟಿಯ ರಾಷ್ಟ್ರೀಯ ಸೇವಾ ಯೋಜನೆ (ಎನ್ಎಸ್ಎಸ್) ಘಟಕದ ವತಿಯಿಂದ “ವಿಶ್ವ ಜನಸಂಖ್ಯಾ ದಿನಾಚರಣೆ”ಯನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಜನಸಂಖ್ಯಾ ಸ್ಫೋಟದ ಸವಾಲುಗಳು ಮತ್ತು ಮಾನವ ಸಂಪನ್ಮೂಲಗಳ ಸದ್ಬಳಕೆಯ ಕುರಿತು ಗಂಭೀರ ಚರ್ಚೆಗಳು ನಡೆದವು.
ಜನಸಂಖ್ಯೆ ವರದಾನವಾಗಿಸಲು ಕೌಶಲ್ಯ ಅಭಿವೃದ್ಧಿ ಅಗತ್ಯ
ಕಾರ್ಯಕ್ರಮದಲ್ಲಿ ಮಾತನಾಡಿದ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಕಾರ್ಯಕ್ರಮ ಅಧಿಕಾರಿ ಹನುಮಂತ್ ಟಕ್ಕನ್ನವರ್, ವಿಶ್ವಸಂಸ್ಥೆಯ ವರದಿಯ ಪ್ರಕಾರ ಭಾರತವು ಜಾಗತಿಕವಾಗಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರವಾಗಿದೆ ಎಂದು ತಿಳಿಸಿದರು. ಈ ಬೃಹತ್ ಮಾನವ ಸಂಪನ್ಮೂಲವನ್ನು ಸದ್ಬಳಕೆ ಮಾಡಿಕೊಳ್ಳಲು ಯುವಕರು ಅತ್ಯುನ್ನತ ಶಿಕ್ಷಣದ ಜೊತೆಗೆ ಅದಕ್ಕೆ ಪೂರಕವಾದ ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದು ಅವರು ಅಭಿಪ್ರಾಯಪಟ್ಟರು. ಇದರಿಂದ ಉದ್ಯೋಗಾವಕಾಶಗಳು ಹೆಚ್ಚಾಗಿ, ಜನಸಂಖ್ಯೆ ಸಮಸ್ಯೆಯಾಗದೆ ವರದಾನವಾಗಬಹುದು ಎಂದು ಅವರು ಹೇಳಿದರು.
ಲಿಂಗ ತಾರತಮ್ಯ ನಿವಾರಣೆಗೆ ಕರೆಯೋಲೆ
ಆಂಗ್ಲ ಉಪನ್ಯಾಸಕರಾದ ಮನೋಜ್ ಕುಮಾರ್ ಊರಮನಟ್ಟಿ ಮಾತನಾಡಿ, 2011ರ ಜನಗಣತಿಯ ಪ್ರಕಾರ ಭಾರತದಲ್ಲಿ ಪ್ರತಿ ಸಾವಿರ ಗಂಡು ಮಕ್ಕಳಿಗೆ ಕೇವಲ 914 ಹೆಣ್ಣು ಮಕ್ಕಳು ಎಂಬ ಚಿಂತಾಜನಕ ಲಿಂಗಾನುಪಾತ ಇರುವುದು ಲಿಂಗ ತಾರತಮ್ಯವನ್ನು ಎತ್ತಿ ತೋರಿಸುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು. ಲಿಂಗ ಸಮಾನತೆಯನ್ನು ಸಾಧಿಸಲು ನಾವೆಲ್ಲರೂ ಪಣತೊಡಬೇಕು ಎಂದು ಪ್ರಾಸ್ತಾವಿಕ ಮಾತುಗಳ ಮೂಲಕ ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯರಾದ ಆನಂದ ಕೋಳಿ ವಹಿಸಿದ್ದರು. ಈ ಸಂದರ್ಭದಲ್ಲಿ ರವಿಚಂದ್ರ ಪಾಟೀಲ್, ವಿಶ್ವನಾಥ್ ಚೌಗುಲಾ, ರುದ್ರಪ್ಪ ಸಂಗಪ್ಪಗೋಳ, ಸಾಗರ್ ಹೆಬ್ಬಾಳೆ, ಶ್ರವಣ್ ಕುಮಾರ್ ಸನದಿ, ಎಂ.ಎ. ಮುಲ್ಲಾ ಸೇರಿದಂತೆ ಇತರ ಉಪನ್ಯಾಸಕರು ಮತ್ತು ಎನ್ಎಸ್ಎಸ್ ಸ್ವಯಂಸೇವಕರು ಉಪಸ್ಥಿತರಿದ್ದರು.
ಸೃಷ್ಟಿ ಕುದುರೆ ಪ್ರಾರ್ಥಿಸಿದರು. ಸ್ವಾತಿ ಕಮತೆ ಸ್ವಾಗತ ಗೀತೆ ಹಾಡಿದರು. ಆರತಿ ಭೂಷಿ ಸ್ವಾಗತಿಸಿದರು. ಗಣೇಶ್ ಪಾಟೀಲ್ ವಂದಿಸಿದರು. ರಶ್ಮಿ ಆನಂದ ಕುಂಬಾರ್ ಕಾರ್ಯಕ್ರಮವನ್ನು ನಿರೂಪಿಸಿದರು.
ವರದಿ: ಚೇತನ ಡಿ.ಕೆ
ನಮ್ಮೂರ ಧ್ವನಿ ನ್ಯೂಸ್
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ
+91 9164577143